ಇದುವರೆಗೂ ವಾಮಾಚಾರದ ಕಥೆ ಇಟ್ಟುಕೊಂಡು ತುಂಬಾ ಸಿನಿಮಾಗಳು ತೆರೆಗೆ ಬಂದು ಹೋಗಿವೆ. ಅಂಥಾ ಮತ್ತೊಂದು ಚಿತ್ರ ಅವತಾರಪುರುಷ-2.
ಈ ಹಿಂದೆ ಬಿಡುಗಡೆಯಾಗಿದ್ದ ಫಸ್ಟ್ ಪಾರ್ಟ್ ಪ್ರೇಕ್ಷಕರನ್ನು ಬ್ಲಾಕ್ ಮ್ಯಾಜಿಕ್ನ ಅದ್ಭುತ ಜಗತ್ತನ್ನು ಕನ್ನಡಿಗರಿಗೆ ಪರಿಚಯಿಸಿತ್ತು, ಈಗ ಅದರ ಮುಂದುವರಿದ ಭಾಗವನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಕಳೆದು ಹೋಗಿದ್ದ ರಾಮಾಜೋಯಿಸ(ಸಾಯಿಕುಮಾರ್)ರ ಮಗ ಮನೆಗೆ ವಾಪಸ್ ಬಂದ ನಂತರ ಆ ಕುಟುಂಬದಲ್ಲಿ ಏನೇನಾಯ್ತು ಅನ್ನೋದನ್ನು ಈ ಚಿತ್ರದಲ್ಲಿ ನಿರ್ದೇಶಕ ಸಿಂಪಲ್ ಸುನಿ ಅನಾವರಣಗೊಳಿಸಿದ್ದಾರೆ. ಜಾತ್ರೆಯಲ್ಲಿ ಕಳೆದುಹೋಗಿದ್ದ ಮಗ ಕರ್ಣ ಮನೆಗೆ ಬಂದ ಖುಷಿ ಒಂದು ಕಡೆಯಾದರೆ, ಕುಮಾರ ಆಗಿದ್ದ ಆತ ವಾಮಾಚಾರ ವಿದ್ಯೆ ಕಲಿತು ತಾನು ಹುಟ್ಟಿ ಬೆಳೆದ ಮನೆಯನ್ನೇ ಸರ್ವನಾಶ ಮಾಡಲು ಹೊರಟಿದ್ದಾನೆಂದಾಗ, ಆ ತಂದೆ ತಾಯಿಯ ಮನಸಿಗೆ ಏನಾಗಿರಬೇಡ, ಚಲನಚಿತ್ರಗಳಲ್ಲಿ ಜೂನಿಯರ್ ಕಲಾವಿದನಾಗಿ ಕೆಲಸ ಮಾಡುತ್ತಿದ್ದ ಶರಣ್, ಕರ್ಣನಾಗಿ ಜೋಯಿಸರ ಮನೆಗೆ ಬಂದು ಇಡೀ ಮನೆಗೆ ಸಂತಸದ ಕಳೆ ತುಂಬಿರುತ್ತಾನೆ, ಅಂಥ ಮಗನನ್ನು ಮನೆಯಿಂದ ಹೊರಹಾಕಿದ್ದು, ಆ ತಾಯಿಯ ಮನಸಿಗೆ ದೊಡ್ಡ ಆಘಾತವನ್ನೇ ಮಾಡಿರುತ್ತದೆ. ಮಗನನ್ನು ಕಾಣಲು ಹಂಬಲಿಸುತ್ತಾಳೆ, ಆ ತಾಯಿಗಾಗಿ ಕರ್ಣ ಮನೆಗೆ ವಾಪಸ್ ಬರುತ್ತಾನೆ. ಅಲ್ಲಿ ನಡೆಯುತ್ತಿದ್ದ ವಿದ್ಯಮಾನಗಳನ್ನು ಕಂಡು, ಕುಮಾರನಿಂದ ಹಾಳಾಗುತ್ತಿದ್ದ ಆ ಮನೆಯನ್ನು ರಕ್ಷಿಸುತ್ತಾನೆ.
ರಾಮಾಜೋಯಿಸರ ಮನೆಯಲ್ಲಿ ತ್ರಿಶಂಕು ಮಣಿ ಇರುವುದು, ಅದೇ ಮಣಿಯನ್ನು ಹುಡುಕುತ್ತಿದ್ದ ದುರುಳ ವಾಮಾಚಾರಿಗಳಿಗೆ ಹೇಗೋ ಗೊತ್ತಾಗಿ, ಅವರ ದೃಷ್ಟಿ ಆ ಮನೆಯ ಮೇಲೆ ಬೀಳುತ್ತದೆ, ಕರ್ಣನೇ ತ್ರಿಶಂಕುಮಣಿಯನ್ನು ರಕ್ಷಿಸಲು ಸೂಕ್ತ ವ್ಯಕ್ತಿ ಎಂದರಿತ ರಾಮಾಜೋಯಿಸರು ಆತನನ್ನು ತನ್ನ ಪತ್ನಿ ಸುಶೀಲಳ ಆತ್ಮವನ್ನು ಬಂದಿಸಿಟ್ಟಿದ್ದ ತ್ರಿಶಂಕು ಲೋಕಕ್ಕೆ ಕಳಿಸುತ್ತಾರೆ. ಅಲ್ಲಿಗೆ ಹೋದ ಕರ್ಣ ತನ್ನ ತಾಯಿಯ ಆತ್ಮವನ್ನು ಬಂಧನದಿಂದ ಬಿಡಿಸುವಲ್ಲಿ ಯಶಸ್ವಿಯಾಗುತ್ತಾನೆ. ನಂತರ ಕುತೂಹಲದಿಂದ ಆತನೇ ತ್ರಿಶಂಕು ಲೋಕಕ್ಕೆ ಹೋಗುತ್ತಾನೆ. ಕರ್ಣ ಮತ್ತೆ ತ್ರಿಶಂಕು ಲೋಕದಿಂದ ಹೊರ ಬರ್ತಾನಾ, ಹೊರಬರೋ ವಿದ್ಯೆ ಆತನಿಗೆ ಗೊತ್ತಾ ಇದೆಲ್ಲ ಪ್ರಶ್ನೆಗಳು ಪ್ರೇಕ್ಷಕನ ತಲೆಯಲ್ಲಿ ಕೊನೆಗೂ ಹಾಗೇ ಉಳಿದುಬಿಡುತ್ತವೆ.
ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ಚಿತ್ರವನ್ನು ಅದ್ದೂರಿಯಾಗಿ ತೆರೆಮೇಲೆ ತಂದಿದ್ದಾರೆ, ಬೇರೆ ಭಾಷೆಯ ಚಿತ್ರಗಳಿಗೆ ಪೈಪೋಟಿ ನೀಡುವಂತೆ ಚಿತ್ರವನ್ನು ಶ್ರೀಮಂತವಾಗಿ ನಿರ್ಮಿಸಿದ್ದಾರೆ. ಇದೊಂದು ಬ್ಲಾಕ್ ಮ್ಯಾಜಿಕ್ ಚಿತ್ರ ಆಗಿರುವುದರಿಂದ ಇಲ್ಲಿ ಲಾಜಿಕ್ ಹುಡುಕುತ್ತ ಹೋಗೋದಕ್ಕಾಗಲ್ಲ, ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಬೇರೆ ಭಾಷೆಯ ಚಿತ್ರಗಳಿಗೆ ಸರಿಸಮನಾಗಿ ನಿಲ್ಲುವಂತಾಗಿರುವುದಕ್ಕೆ ನಾವೆಲ್ಲ ಹೆಮ್ಮೆ ಪಡಬೇಕು.
ನಿರ್ದೇಶಕ ಸಿಂಪಲ್ ಸುನಿ ಈ ಚಿತ್ರಗಳ ಮೂಲಕ ಪ್ರೇಕ್ಷಕರಿಗೆ ಮ್ಯಾಜಿಕ್ಕನ್ನೇ ಮಾಡಿದ್ದಾರೆ. ಜೊತೆಗೆ ನಾಯಕ ಶರಣ್ ತನಗೆ ಸಿಕ್ಕ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ, ನಾಯಕಿ ಆಶಿಕಾ ರಂಗನಾಥ್ ಪಾತ್ರಕ್ಕೆ ಅಷ್ಟೇನೂ ಪ್ರಾಮುಖ್ಯತೆ ಇಲ್ಲದಿದ್ರೂ ತೆರೆಮೇಲೆ ತಾಯಿ ಯಶೋಧ,(ಸುಧಾರಾಣಿ) ಮಗಳ ಜೋಡಿ ನೋಡುಗರನ್ನು ಮೋಡಿ ಮಾಡುತ್ತದೆ, ಹಿಂದಿನ ಅವತಾರಪುರುಷ ನೋಡದವರೂ ಈ ಚಿತ್ರ ಅರ್ಥವಾಗುವಂತೆ ಹಿಂದಿನ ಕಥೆಯನ್ನು ಫ್ಲ್ಯಾಷ್ ಬ್ಯಾಕ್ ಥರ ಚುಟುಕಾಗಿ ಹೇಳಿದ್ದಾರೆ. ಅಭಿನಂದನ್ ಕಶ್ಯಪ್ ಅವರ ಸಂಗೀತ ಚಿತ್ರದ ಮತ್ತೊಂದು ಹೈಲೈಟ್ ಆಗಿದೆ.
ಇಲ್ಲಿ ಶ್ರೀನಗರ ಕಿಟ್ಟಿ ಅವರ ಪಾತ್ರಕ್ಕೆ ಮಾತಿಲ್ಲ. ರಾಮಾಜೋಯಿಸರಾಗಿ ಸಾಯಿಕುಮಾರ್ ಅಷ್ಟೇ ಗಂಭೀರವಾಗಿ ಅಭಿನಯಿಸಿದ್ದಾರೆ. ಉಳಿದಂತೆ ಸಾಧು ಕೋಕಿಲ ಅವರ ಕಾಮಿಡಿ ಅಷ್ಟಾಗಿ ನಗು ತರಿಸದು. ಇನ್ನು ದುಷ್ಟ ವಾಮಾಚಾರಿಯ ಪಾತ್ರದಲ್ಲಿ ಅಶುತೋಷ್ ರಾಣಾ ಅಬ್ಬರಿಸಿದ್ದಾರೆ.